ಬರೆದಿಟ್ಟ ಕವಿತೆ ಹಠಾತ್
ಮಾಯವಾದರೆ ಕಟ್ಟಿಟ್ಟ ಮೋಢ
ಮಳೆ ಸುರಿಸಿದಂತೆ
ರಸ್ತೆಗಳಲ್ಲಿ ಕೆನ್ನೆ ಗುಳಿಯ
ಹಾಗೆ ಗುಂಡಿಗಳು
ಬಿಡುಗಡೆಯ ಬೇಡಿ
ಇಂತಹ ಸಂಜೆಗಳಲ್ಲಿ
ಸಂದಿಗ್ಧ ಮುಗಿಲು
ಪಾಪಿ ಲೋಕದ ಕಪ್ಪು
ರಸ್ತೆಗಳ ಮೇಲೆ ಸುರಿವುದೇನನ್ನು
ಯಾಕಾಗಿ?
ಅಶಾಂತ ಟ್ರಾಫಿಕ್ಕಿನಡಿ ಸಿಲುಕಿದ
ಬಿಳಿ ಕಾರುಗಳೆಡೆ ತಪ್ತ
ಆತ್ಮಗಳು ಕಡಿಮೆ ದರದ ತರಕಾರಿಗಳ
ಹುಡುಕುವಾಗ
ಗಾಜಿನ ಪರದೆಯ ಹಿಂದೊಂದು
ಸಿಗರೇಟಿನಾತ್ಮವ ಸುಡುತ್ತೇನೆ
ಸುಳ್ಳು ತತ್ವಗಳು ಹುಟ್ಟಿ
ಮಾತನಾಡುತ್ತವೆ ಸುಳ್ಳು ಸಮಾಧಾನಗಳ
ಎಲ್ಲಿ ಹೋದೆ ಬೆಕ್ಕೆ?
ಒಣ ಹವೆ ಧೂಳು ಹೊಗೆಗಳ
ನಡುವೆ ಹಿಡಿ ಪ್ರೀತಿಯ ಲೆಕ್ಕ ಹಿಡಿವಾಗ
ಕಣ್ಣು ಕಟ್ಟಿಟ್ಟು ಯಾಕೆ ಹೋದೆ ಬಿಟ್ಟು?