ರಂಗದಿಂದೊಷ್ಟು ದೂರ
ಸರಿದರೆ
ನಟ ಪ್ರೇಕ್ಷಕ ಮಾಸ್ತರೆಲ್ಲ
ಮೆಲ್ಲ ಮರೆಯಾಗಿ
ನನ್ನೊಳಗಿನ ನಾನು
ಮೈ ಮುರಿದು ಆಕಳಿಸಿ
ಏಳುತ್ತೇನೆ
ಆದರೂ…
ಕ್ಷೀಣ ದನಿಯ ಹಾರ್ಮೊನಿಯಮ್ಮು
ಕೇಳು ಕೇಳೆನುವ ಆತ್ಮಗೀತೆ
ಬರೆಯದ ರಂಗೋಲಿ
ಒಣ ಹವೆ ಧೂಳು
ಬಿಡುಗಡೆಯಿರದ ಪಾತ್ರ
ಗಳ ಇಲ್ಲೆ ಕಟ್ಟಿಟ್ಟು
ದಾಟಿ
ಹೊರಡಬೇಕಿದೆ
ಕಣಿವೆ ದಾಟದಿದ್ದೀತೆ ರಂಗಗೀತೆ?
ಎದೆ ಮೇಲೆ
ಕನಸಿಂದ ಹನಿದ
ಒದ್ದೆ ನೋವು
ಬೆಂಬಿಡದ ನೆರಳು.
ನಮ್ಮಾತ್ಮವನೆ ಮೀರುವುದುಂಟೆ ನಾವು?