ಎಲ್ಲೋ ಜೋರು ಮಳೆ ಸುರಿದಿರಬೇಕು. ಇಳೆ ಕರಗಿ ಸಾಗರದೆಡೆ ಹೊರಟ ಹಾಗೆ ಸೀತಾನದಿ ಕೆಂಪು ಕೆಂಪಾಗಿ ಸದ್ದು ಮಾಡುತ್ತಾ ಹರಿಯುತ್ತಿತ್ತು.
ಅವಳು ಎಲ್ಲೋ ನಮ್ಮ ಹಾಗೆ ಹಿಡಿದ ಕೊಡೆಗಳ ಮೇಲೆ ಬಿದ್ದ ಹನಿ ಇನ್ನೆಲ್ಲೆಲ್ಲೋ ಹರಿದು ಕೊನೆಗೆ ಮತ್ತೆ ಮೋಡ ಸೇರಿ ಹನಿಯಾಗುವ ಕೌತುಕದ ಬಗ್ಗೆ ನೀರು ನೋಡುತ್ತಾ ಕತೆ ಹೇಳುತ್ತಿದ್ದಳು. ಮಂಜಿನಂತೆ ಬೀಳುತ್ತಿದ್ದ ಮಳೆಗೆ ಅವಳ ಕೇಶರಾಶಿಯಿಂದ ಹೊರಡುತ್ತಿದ್ದ ಅವಳದೇ ಘಮದ ಸದ್ದಿನ ಮಾಧುರ್ಯ ಸವಿಯುತ್ತಾ ನಿಂತಿದ್ದೆ.
ಜೋರಿರಲಿಲ್ಲ; ಜುಮುರು ಮಳೆಯಷ್ಟೇ. ಗಾಳಿಯ ಸೆಳೆತ, ಕುಳಿರು ಹೆಚ್ಚಿತ್ತು. ನನ್ನ ಚಳಿ ಕಮ್ಮಿಯಾಗಲೊ ಏನೋ ನದಿಯಿಂದ ಬೀಸಿ ಬರುವ ಗಾಳಿಗೆ ಅಡ್ಡ ನಿಂತಿದ್ದಳು. ಆದರೂ ಮುಖಕ್ಕೆ ಗಾಳಿ ಬೀಸಿ ಬೀಸಿ ಹೊಡೆಯುತ್ತಿತ್ತು. ಐದಡಿ ಏಳು ಮಲ್ಲಿಗೆ ತೂಕದ ರಾಜಕುಮಾರಿ ಅಂತ ನಗಿಸುತ್ತಿದ್ದದ್ದು ನೆನಪಾಯಿತು.
“ಚಳಿ ಕಣೆ” ಅಂತ ಬಳಸಿ ಹಿಡಿದೆ. ಹತ್ತಿರದಲ್ಲೇ ಮನೆಗಳ ಬೆಳಕು ಹನಿಗಳ ವಕ್ರೀಭವನದ ನಡುವೆ ಆಡುತ್ತಿತ್ತು. ಮೆಲ್ಲಗೆ ಎದೆಗೊರಗಿದಳು.
ಹತ್ತು ವರ್ಷಗಳೇ ಕಳೆದು ಹೋಗಿವೆ. ಅಂದು ಬಿಟ್ಟು ಬಂದ ಗುಲ್ ಮೊಹರುಗಳಲ್ಲಿ ಈಗಲೂ ಹೂವಿರಬಹುದು. ಅದೇ ಮರಗಳ ಕೆಳಗೆ ಮತ್ತಾರೋ ಇಬ್ಬರು ಅದೇ ಅರ್ಥವಿಲ್ಲದ ಮಾತುಗಳಿಗೆ ನಗುತ್ತಾ ಇರಬಹುದು.
“ನಿಂಗೆ ಯಾವ ಜನ್ಮದಿಂದ ನಾನಿಷ್ಟ?”
ಗಾಳಿ ಒಮ್ಮೆ ಕಾಡ ನಡುವೆ ಹುಟ್ಟಿ ಮತ್ತೊಂದಿಷ್ಟು ಚಳಿಯನ್ನು ನೀರ ಮೇಲಿಂದ ಬೊಗಸೆ ಕೈಗಳಲ್ಲಿ ಎತ್ತಿಕೊಂಡು ಬಂದು ರಾಚಿತು. ಗಾಳಿಗೆ ಕುಣಿದ ತಲೆಗೂದಲನ್ನ ಮೆಲ್ಲ ಸರಿಸಿ ಕತ್ತಿಗೆ ಮುತ್ತಿಟ್ಟೆ.
ಕೈಗಳ ಬಿಗಿ ಸಡಿಲವಾಗದ ಹಾಗೆ ಮೆಲ್ಲ ನನ್ನೆಡೆಗೆ ತಿರುಗಿದಳು.
ಕವಿಗಳು ಬರೆವ ಹಾಗೆ ಅವಳ ಅಧರಗಳು ಮೆಲ್ಲ ನಡುಗುತ್ತಿದ್ದವೇ? ಕಣ್ಣುಗಳಲ್ಲಿ ಬೆದರಿದ ಜಿಂಕೆಮರಿಯೊಂದಿತ್ತೇ?
ಇಲ್ಲ.
ಚಳಿಗಾಲದ ಸಂಜೆಗಳಲ್ಲಿ ಸದ್ದಿರದೆ ಹರಿವ ನದಿ ಅವಳ ಕಣ್ಣಲ್ಲಿತ್ತೇ? ಬಹುಷಃ ಅದೇ ಸರಿಯೇನೋ!
ಹಿಂದೊಮ್ಮೆ ಶಾಂತ ಸ್ವಭಾವದ ಇದೇ ನದಿಯ ಕಣಿವೆಗಳಲ್ಲಿ ಮುಳುಗಿ ಉಸಿರು ನಿಂತದ್ದು, ಯಾರೋ ಬಂದು ನೀರಿನಿಂದ ಮೇಲೆತ್ತಿ ಬದುಕಿಸಿದ್ದು ನೆನಪಾಯ್ತು.
ಎಷ್ಟು ನೆನಪುಗಳು! ನಮ್ಮ ಉಸಿರು ನಿಂತ ಮೇಲೆ ನಮ್ಮ ನೆನಪುಗಳು ಎಲ್ಲಿ ಹೋಗುತ್ತವೆ? ಕಾಲಗರ್ಭದಲ್ಲಿ ನಮ್ಮ ಅರ್ಥವೇನು?
ಕಪ್ಪುಗಟ್ಟಿದ ಮುಗಿಲು ಯಾರೋ ತಟ್ಟಿ ಎಬ್ಬಿಸಿದ ಹಾಗೆ ಸುರಿಯಲು ಪ್ರಾರಂಭಿಸಿತು. ತೆಕ್ಕೆ ಬಿಡದೆ ಹಾಗೇ ರಸ್ತೆಯ ಆ ಬದಿಗೆ ನಡೆದೆವು. ಕಪ್ಪು ಕಾರೊಂದು ಕತ್ತಲೆ ಸೀಳುತ್ತಾ ಘರ್ಜಿಸುತ್ತಾ ಬರುತ್ತಿದೆ. ಈ ಸರಿರಾತ್ರಿ ಈ ಮಲೆನಾಡಿನ ರಸ್ತೆ ಮಧ್ಯೆ ನರಮನುಷ್ಯರು ತಬ್ಬಿಕೊಂಡು ನಡೆಯುತ್ತಿರುತ್ತಾರೆಂದು ಕನಸಲ್ಲೂ ಎಣಿಸಿರದ ಚಾಲಕ ಒಂದಷ್ಟು ಗೊಂದಲ ಒಂದಷ್ಟು ಭಯದ ನಡುವೆ ಕಾರನ್ನ ಸರ್ರೆಂದು ಬಲಕ್ಕೆಳೆದು ಬಯ್ಯುತ್ತಾ ಮುಂದೆ ಹೋದ.
“ಯಾಕೆ ಅಲ್ಲಿಂದ ಎಳ್ಕೊಂಡು ಬಂದೆ? ಎಷ್ಟು ಚಂದ ಇತ್ತು.”
“ಮಳೆ ಯಾವಾಗ್ಲೂ ಚಂದಾನೇ. ಹಾಗಂತ ಈ ಮಳೇಲಿ ನೆಂದ್ರೆ ನಾಳೆ ಹುಷಾರಿಲ್ಲ ಅಂತಾದ್ರೆ ನಿಮ್ಮಪ್ಪ ಕೇಳೋದು ನನ್ನೇ. ನನ್ ಜೊತೆ ಈ ರಾತ್ರೀಲಿ ಸುತ್ತೋಕೆ ಬಿಟ್ಟಿದ್ದೇ ದೊಡ್ಡದು ಗೊತ್ತಲ್ವಾ?”
“ಚಂದ ಇದೆ ಅಂದಿದ್ದು ಮಳೆಗಲ್ಲ”
ತೆಕ್ಕೆ ಯಾಕೋ ಬಿಗಿಯಾಯ್ತು. ಮೆಲ್ಲ ಮುಖವೆತ್ತಿ ಕಣ್ಣಲ್ಲಿ ಕಣ್ಣಿಟ್ಟವಳು ಏನು ಹೇಳಹೊರಟಿದ್ದಾಳೆ ಅಂತ ಗೊತ್ತಾಗಲಿಲ್ಲ.
“ದಡ್ಡ ಕಣೋ ನೀನು” ಅಂದವಳು ಕುತ್ತಿಗೆ ಬಳಸಿ ತುದಿಗಾಲ ಮೇಲೆ ನಿಂತು ಕಣ್ಣಿಗೆ ಕಣ್ಣಿಟ್ಟಳು.
ಅವಳ ತುಟಿಗಳಲ್ಲಿ ತಾಜಾ ಮಳೆಹನಿಯ ಘಮವಿತ್ತು. ಮೆಲ್ಲಗೆ ಕೆಳದುಟಿಯನ್ನು ಆವರಿಸುವಾಗ ಅವಳ ಮೂಗುಬೊಟ್ಟು ಕೆಂಪಾದಂತನ್ನಿಸಿತು. ಮಳೆಗೆ ತುಸು ನೆಂದಿದ್ದ ಕಿವಿಯನ್ನು ಅಂಗೈ ತಲುಪಿದಾಗ ಇಷ್ಟೇ ಇಷ್ಟು ಬಲಕ್ಕೆ ಕತ್ತು ಜರುಗಿಸಿ ಬಾಹುಬಂಧನ ಬಿಗಿಗೊಳಿಸಿದಳು.
ಎಷ್ಟು ಹೊತ್ತಿದ್ದೆವು ಆ ಕ್ಷಣಗಳಲ್ಲಿ? ಅಷ್ಟಕ್ಕೂ ಕಾಲಪ್ರವಾಹವನ್ನು ಇಷ್ಟಿಷ್ಟು ಅಂತ ಲೀಟರುಗಳಲ್ಲೂ ನಿಮಿಷಗಳಲ್ಲೂ ಅಳೆಯುವುದು ಮೂರ್ಖತನ ತಾನೇ? ಎಂದೂ ಸಾಲದಷ್ಟು ಅಂತಂದರೆ ಸಾಲದೆ?
ಇನ್ನೇನು ಹೊರಡಬೇಕು. ನಮ್ ನಮ್ಮ ಪ್ರಪಂಚಗಳ ಮೂಲೆಯಲ್ಲೆಲ್ಲಾದರೂ ಕದ್ದೊಯ್ದ ಕ್ಷಣಗಳನ್ನು ಬಚ್ಚಿಡಬೇಕು.
ಹೊರಗೆ ಮಿಂಚು ಗುಡುಗುಗಳ ಜುಗಲ್ಬಂಧಿ. ಮಳೆ ನಿಂತಿತ್ತು.
ಸೀತಾನದಿಯಲ್ಲಿ ಅದೇ ಪ್ರಶಾಂತಿಯಿತ್ತು.